ಕಗ್ಗದ ಭಟ್ಟರು
ಮೊನ್ನೆ ಶನಿವಾರ, ಅಶಕ್ತ ಪೋಷಕ ಸಭಾದಲ್ಲಿ ನಡೆದ, ವಾರದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಬಂದಿದ್ದವರು ' ಕಗ್ಗದ ಭಟ್ಟ ' ಎಂದೆ ಖ್ಯಾತರಾದ ಪ್ರೊ. ಎಚ್ ಎಸ್ ಲಕ್ಷ್ಮೀನಾರಾಯಣ ಭಟ್ಟರು. ಸಾಹಿತ್ಯದಲ್ಲಿ ಹಾಸ್ಯ ಎಂಬ ವಿಷಯವನ್ನು ಇಟ್ಟುಕೊಂಡು, ಸುಮಾರು ಒಂದು ಗಂಟೆಗೂ ಮಿಕ್ಕಿ ಮಾತನಾಡಿದ / ಹಾಡಿದ / ಹಾಡಿಸಿದ ಭಟ್ಟರು, ಹಿರಿಯ ನಾಗರಿಕರ ಪಾಲ್ಗೊಳ್ಳುವಿಕೆಯನ್ನು, ಪ್ರೋತ್ಸಾಹಿಸಿದರು, ಸಫಲರಾದರು ಸಹ. 80 ವರ್ಷದ ಲಕ್ಷ್ಮೀನಾರಾಯಣ ಭಟ್ಟರು ಹಾಡುಗಳನ್ನು ಹಾಡುವಾಗ, ಸ್ವರ ಮೇಲೆತ್ತಲು ಸ್ವಲ್ಪ ಕಷ್ಟ ಪಟ್ಟರೂ ಸಹ, ಉತ್ಸಾಹ ಮಾತ್ರ ಉತ್ತುಂಗದಲ್ಲಿತ್ತು. ಪ್ರತಿ ಹಂತದಲ್ಲೂ ಒಂದಲ್ಲ ಒಂದು ಗಾಯನ ಇದ್ದೇ ಇತ್ತು. ಇಂಗ್ಲೀಷ್ ಮಿಶ್ರಿತ ಹಾಸ್ಯರೂಪದ ಗಣಪತಿಯ ಸ್ತೋತ್ರ, ಬೆಂಗಳೂರಾಯಿತು ಬೊಂಬಾಯಿ ಎಂದು ಶುರು ಮಾಡಿ, ಬೆಂಗಳೂರಿನ ಕೆಲವು ಅಪಸವ್ಯಗಳನ್ನು ಹಾಸ್ಯ ಭರಿತವಾಗಿ ಪ್ರಸ್ತುತ ಪಡಿಸಿದರು. ಈಶ್ವರನ ತೊಡೆಯ ಮೇಲೆ ಕೂತ ಗೌರಿ ಹಾಗೂ ತಲೆಯ ಮೇಲೆ ಕೂತ ಗಂಗೆ ಇವರಿಬ್ಬರನ್ನು ಸಂಭಾಳಿಸುವ ಪ್ರಸಂಗವನ್ನು ವಿವರಿಸಿ, ಎಲ್ಲರೂ ಶಿವನಿಗೆ ಅಯ್ಯೋ ಪಾಪ ಅಯ್ಯೋ ಪಾಪ ಎಂದು ಹೇಳುವಂತೆ ಮಾಡಿದ್ದು ವಿಶಿಷ್ಟವಾಗಿತ್ತು. ಆಚೆ ಮನೆ ಸುಬ್ಬಮ್ಮನ ಏಕಾದಶಿ ಉಪವಾಸದ ವರ್ಣನೆ, ಸಾಕಷ್ಟು ಸಲ ಕೇಳಿದ್ದ ನಿವಾಸಿಗಳಿಗೂ, ನಗೆಯುಕ್ಕಿಸಲು ಸಾಧ್ಯವಾಯಿತು. ಕಗ್ಗದ ಭಟ್ಟರಾಗಿ, ಕಗ್ಗವನ್ನು ಬಿಡಲಾದೀತೆ ? ನಗುವೊಂದು ರಸಪಾಕ ಅಳುವೊಂದು ರಸಪಾಕ, ನಗುವು ಸ...