ಶ್ರಾವಣ - ನಿರಾಶೆಗೆ ಕಾರಣ
ಶ್ರಾವಣ ಬಂತು ಕಾಡಿಗೆ, ಬಂತು ನಾಡಿಗೆ, ಬಂತು ಬೀಡಿಗೆ... ಬಂತು ಶ್ರಾವಣ... ಬೇಂದ್ರೆಯವರ ಈ ಹಾಡು ಕೇಳಲು ಪುಳಕ... ಅದರಲ್ಲೂ ಸಿ ಅಶ್ವತ್ ಅವರು ರಾಗ ಸಂಯೋಜಿಸಿ ಹಾಡಿದ್ದನ್ನು ಕೇಳುವಾಗ ಅರಿವಿಲ್ಲದಂತೆ ಕಾಲು ಹೆಜ್ಜೆ ಹಾಕುತ್ತದೆ ಕೈ ಜೊತೆಗೂಡಿಸುತ್ತದೆ. ಶ್ರವಣ ನಕ್ಷತ್ರದ ಪ್ರಾಧಾನ್ಯತೆಯ ಕಾರಣ ಶ್ರಾವಣ ಮಾಸ ಎಂಬ ಹೆಸರು ಬಂದಿರಬಹುದೇ? ಪ್ರಶ್ನೆ ಪಕ್ಕಕ್ಕೆ ಇಟ್ಟು ಗಮನಿಸಿದರೆ, ಶ್ರಾವಣಮಾಸ, ಶುರುವಾಯಿತೆಂದರೆ, ಹಬ್ಬಗಳ ಸಾಲು ಶುರುವಾದಂತೆ. ನಾವು ಚಿಕ್ಕವರಿದ್ದಾಗ ಹಬ್ಬ ಎಂದ ಕೂಡಲೇ.. ಆಯಾ ಹಬ್ಬಗಳ ವಿಶೇಷ ಸಿಹಿ ತಿನಿಸುಗಳ ತಿನ್ನುವ ಸಂಭ್ರಮ. ಭೀಮನ ಅಮಾವಾಸ್ಯೆಯ ದಿನ, ಹೊಸ್ತಿಲ ಮೇಲಿಟ್ಟ ಭಂಡಾರವನ್ನು, ಮೊಣ ಕೈಯಿಂದ ಗುದ್ದಿ, ಒಳಗಿಟ್ಟಿರುವ ಕಾಸನ್ನು ತೆಗೆದುಕೊಂಡು, ಸಿಹಿಯನ್ನು ತಿನ್ನುವುದು. ನಾಗರ ಪಂಚಮಿಯಂದು ಅಕ್ಕಂದಿರ ಮನೆಗೆ ಹೋಗಿ, ಬೆನ್ನು ತೊಳಿಸಿಕೊಂಡು, ನುಚ್ಚಿನುಂಡೆ, ಹೊಯ್ಗಡುಬು ತಿನ್ನುವ ಕಾರ್ಯಕ್ರಮ. ವರಮಹಾಲಕ್ಷ್ಮಿಯ ಹಬ್ಬಕ್ಕಂತು ಒಬ್ಬಟ್ಟಿನ ಸಮಾರಾಧನೆ. ಇದೆಲ್ಲದರ ಮಧ್ಯೆ ಶ್ರಾವಣ ಶನಿವಾರದಂದು ಮಾಡಲೇಬೇಕಾದ ಪಡಿ ಬೀರುವ ಕಾಯಕ. ಶನಿವಾರ morning class. ಅಂದರೆ ಬೆಳಿಗ್ಗೆ ಬೇಗ ಪ್ರಾರಂಭ. ಸುಮಾರು 8 ಘಂಟೆ ಇರಬಹುದಾ ನೆನಪಿಲ್ಲ. ( ಬೇರೆ ದಿವಸ 10 ಗಂಟೆಗೆ ಪ್ರಾರಂಭ ಆದರೂ ಅದು ಮಾರ್ನಿಂಗ್ ಅಲ್ಲ ...ಯಾಕೋ ). ಅಷ್ಟರಲ್ಲಿ ಸ್ನಾನ ಮಾಡಿ, ಅಕ್ಕ...