ಕುರುಡು ಪ್ರೀತಿ ತಂದ ಫಜೀತಿ
ಬುಧವಾರ ಸಂಜೆ ಆಪ್ತಸಮಾಲೋಚನೆಯ ಸಮಯ. ಪ್ರಸನ್ನ ಆಪ್ತ ಸಲಹಾ ಕೇಂದ್ರಕ್ಕೆ ಹೊರಡಲು ತಯಾರಿ ಮಾಡಿಕೊಳ್ಳುತ್ತಿದ್ದೆ... ಆಗ ಬಂದದ್ದು ದೂರವಾಣಿ ಕರೆ... ಅತ್ತ ಕಡೆಯಿಂದ ನಮಸ್ಕಾರದ ನಂತರ ಕೇಳಿದ್ದು ಎಷ್ಟು ಹೊತ್ತಿಗೆ ಬರುತ್ತೀರಾ? ಮಾತಿನಿಂದ ಅರ್ಥವಾಯಿತು ಇದು ಆಪ್ತ ಸಲಹೆ ವಿಚಾರಕ್ಕಾಗಿ ಎಂದು. ಇನ್ನೇನು ಹೊರಟಿದ್ದೇನೆ, 20 ನಿಮಿಷದಲ್ಲಿ ಅಲ್ಲಿರುತ್ತೇನೆ, ಎಂದು ಹೇಳಿ ಮಾತು ಮುಗಿಸಿದೆ. ಪ್ರಸನ್ನ ಆಪ್ತ ಸಲಹಾ ಕೇಂದ್ರದ ಬಾಗಿಲು ಹೊಕ್ಕಂತೆಯೇ ಎದುರಾದದ್ದು ಮಧ್ಯ ವಯಸ್ಸಿನ ಇಬ್ಬರು ಗಂಡಸರು, ನನಗಾಗಿ ಕಾಯುತ್ತಿದ್ದವರು. ಪರಿಚಯದ ನಂತರ ಮಾತು ಪ್ರಾರಂಭ ಮಾಡುವ ಸಮಯ " ಮೀರು ಚಪ್ಪಂಡ ಸರ್..." ಎಂಬ ಮಾತು ಹೇಳಿದ್ದು ನಂತರ ತಿಳಿದಂತೆ ಹುಡುಗಿಯ ಅಪ್ಪ. ಅವರೊಂದಿಗಿನ ಮಾತಿನ ಸಾರಾಂಶ: ಇಬ್ಬರು ಬೀಗರುಗಳು. ಮಕ್ಕಳ ಮದುವೆಯಾಗಿ ಇನ್ನೂ ವರ್ಷ ಕಳೆದಿಲ್ಲ. ಚಿಕ್ಕವಯಸ್ಸಿನ ಮಕ್ಕಳಿಗೆ ತಮ್ಮ ಇಚ್ಛೆಗೆ ವಿರುದ್ಧ, ಆದರೆ ಅನಿವಾರ್ಯವಾಗಿ ಮದುವೆ ಮಾಡಿ ಮುಗಿಸಿದ್ದಾರೆ. ಎರಡು ಕುಟುಂಬಗಳ ಹಣಕಾಸಿನ ಪರಿಸ್ಥಿತಿ ಹೊಂದಾಣಿಕೆಯಾಗದಿರುವುದೇ ದೊಡ್ಡ ವಿಚಾರ. ಹುಡುಗಿಯ ಮನೆಯವರು ಉಳ್ಳವರು, ಹುಡುಗನ ಮನೆಯವರು ಮಧ್ಯಮ ವರ್ಗದ ಕುಟುಂಬ. ಸದ್ಯದ ಪರಿಸ್ಥಿತಿಯಲ್ಲಿ, ಮಗಳು ತವರು ಮನೆಗೆ ಬಂದಿದ್ದಾಳೆ.. ಗಂಡನ ಮನೆಗೆ ಹೋಗಲು ಮನಸ್ಸಿಲ್ಲ. ಯಾವ ವಿಷಯವನ್ನು ಮಾತನಾಡುತ್ತಿಲ್ಲ. ಈ ಕಡೆ ಮಗನ ಮನೆಯಲ್ಲೂ ಬಿಗು ವಾತಾವರಣ, ಹುಡುಗನ...