ರಥೋತ್ಸವ - ಮತ್ತೊಮ್ಮೆ
ಶಿವರಾತ್ರಿ ಕಳೆದರೆ, ಛಳಿ ಶಿವ-ಶಿವಾ ಅಂತ ಓಡಿ ಹೋಗುತ್ತೆ ಅನ್ನುವುದು ಒಂದು ಮಾತು. ಬೇಸಿಗೆಯ ಕಾಲ ಪ್ರಾರಂಭವಾದಂತೆ, ಕೃಷಿಯೇ ಪ್ರಧಾನ ಕಸುಬಾಗಿದ್ದ ಕಾಲದಲ್ಲಿ, ಸುಗ್ಗಿಯ ಕಾಲ ಮುಗಿದು, ಅಳಿದುಳಿದ ಕೆಲಸಗಳನ್ನು ಮುಗಿಸಿದ ರೈತನಿಗೆ ಇದು ಸ್ವಲ್ಪ ಬಿಡುವಿನ ಸಮಯ ಆದಕಾರಣ, ಮನಸ್ಸು ಬೇರೆಯ ಕಡೆಗೆ ಹೊರಳುತ್ತದೆ. ಮಳೆ ಗಾಳಿ ಇಲ್ಲದ ಕಾಲವಾದ್ದರಿಂದ, ಸಾರ್ವಜನಿಕ ಕಾರ್ಯಕ್ರಮಗಳಿಗೆ ಸೂಕ್ತವಾದ ಕಾಲ. ಹಾಗಾಗಿ ಈ ತೇರು, ಜಾತ್ರೆ, ರಥೋತ್ಸವ,ಪರಿಷೆ ಎಲ್ಲವೂ ನಡೆಯುವುದು ಬೇಸಿಗೆಯ ಕಾಲದಲ್ಲಿ. ಹೋದ ಭಾನುವಾರ (22.02.2026), ಹೂವಿನಕಟ್ಟೆಯ ಗುಡ್ಡದ ರಂಗನಾಥ ಸ್ವಾಮಿಯ ರಥೋತ್ಸವದಲ್ಲಿ ಭಾಗಿಯಾಗಿದ್ದೆ. 1979 ರಲ್ಲಿ ಮೊದಲಾದಂದಿನಿಂದ ನಾನು ಅತಿ ಹೆಚ್ಚು ಬಾರಿ ಭಾಗಿಯಾದ ಜಾತ್ರೆ. ಅಂದು ಇದ್ದ ದೇವಸ್ಥಾನ, ಅದರ ಪರಿಸರಕ್ಕೂ ಇಂದಿನದಕ್ಕೂ ಅಜಗಜಾಂತರ. ಆಗಿನದು ಮುಗ್ಧ ಭಕ್ತಿಯ ಸಂಕೇತ...ಈಗಿನದು ಭಕ್ತಿಯ ಜೊತೆಗೆ ಆಡಂಬರ ಹಾಗೂ ಆಧುನೀಕತೆಯ ಮಿಶ್ರಣ. ದೇವಸ್ಥಾನ ಹತ್ತಿರವಾಗುತ್ತಿದ್ದಂತೆ ಕಣ್ಣಿಗೆ ಬಿದ್ದದ್ದು ಬಣ್ಣ ಬಣ್ಣದ ಬಟ್ಟೆಗಳಿಂದ, ಹೂವಿನ ಹಾರಗಳಿಂದ ಅಲಂಕೃತವಾದ ತೇರು. ದೇವಸ್ಥಾನದ ಹೊರಗೂ ಒಳಗೂ ವಿಶೇಷ ಹೂವಿನ ಅಲಂಕಾರ ಈ ಬಾರಿಯ ಆಕರ್ಷಣೆಯಾಗಿತ್ತು. ದಾರಿ ಯುದ್ಧಕ್ಕೂ ಅಂಗಡಿಗಳ ಸಾಲು. ಕಡಲೆಪುರಿ, ಅದಕ್ಕೆ ಬೆರೆಸಲು ಹುರಿಗಡಲೆ, ಬೆಲ್ಲ, ಕಾರ ಸೇವು, ಜೊತೆಗೆ ಬತ್ತಾಸು, ಕಲ್ಯಾಣ ಸೇವೆ ಆಗ ತಾನೇ ರೆಡಿಯಾಗುತ್...