ಕಣ್ಮರೆಯಾದ ಕೃಪ
ನಾರಾಯಣ ನಿನ್ನ ನಾಮದ ಸ್ಮರಣೆಯ ಸಾರಾಮೃತವು ನನ್ನ ನಾಲಿಗೆಗೆ ಬರಲಿ... ಕಷ್ಟದಲ್ಲಿರಲಿ... ಉತ್ಕೃಷ್ಟದಲ್ಲಿರಲಿ... ... ... ಎಂತೋ ಶ್ರೀ ಪುರಂದರ ವಿಠಲನ ನಾಮವ ಅಂತ್ಯಕಾಲದಲ್ಲಿ ಚಿಂತಿಸೋ ಹಾಗೆ.... ಹೋಗಿ ಬಾ... ಕೃಪಾ... ಹೋಗಿ ಬಾ.. . ಎಂದು ಹಾಡಿ, ನಾದಾಕ್ಷತೆಯನ್ನು ಕೊಟ್ಟು ವಿದಾಯ ಹೇಳಿದವರು ಸಂಗೀತ ವಿದ್ವಾನ್ ಆರ್ ಕೆ ಪದ್ಮನಾಭ ಅವರು, ತಮ್ಮ ಪ್ರೀತಿಯ ಗೆಳೆಯ / ನೆಂಟ ಕೃಪಾ ಅವರ ಪಾರ್ಥಿವ ಶರೀರದ ಮುಂದೆ ನಿಂತು. ಈ ಸಮಯದಲ್ಲಿ ನೆರೆದಿದ್ದ ಬಹು ಜನರ ಕಣ್ಣಲ್ಲಿ ನೀರು ತುಂಬಿದ್ದನ್ನು ಗಮನಿಸಿದೆ, ಅದರಲ್ಲೂ ಕೃಪಾ ಅವರ ಮಗನ ದುಃಖದ ಕಣ್ಣೀರು ಮನಸ್ಸು ಕಲಕುವಂತಿತ್ತು. ಅಲ್ಲಿಂದ ಹೊರಟ ಪಾರ್ಥಿವ ಶರೀರ ಬನಶಂಕರಿಯ ವಿದ್ಯುತ್ ಚಿತಾಗಾರವನ್ನು ಮುಟ್ಟಿದ ನಂತರ, ಶಾಸ್ತ್ರೋಕ್ತವಾಗಿ ಅಂತ್ಯಕ್ರಿಯೆಯ ವಿಧಿ ವಿಧಾನಗಳನ್ನು ಮುಗಿಸಿ ಚಿತಾಗಾರದೊಳಗೆ ದೇಹವನ್ನು ಕಳಿಸಿದಾಗ.... ಧಗ್ಗನೆ ಬೆಂಕಿ ಹತ್ತಿ ದೇಹವನ್ನು ಆವರಿಸಿದಾಗ.. ಮನಸ್ಸು ಮೂಕವಾಗಿ ರೋದಿಸಿತು. ಆತ್ಮೀಯ ಗೆಳೆಯ ಕೃಪ ಅಗ್ನಿಯಲ್ಲಿ ಲೀನವಾಗಿ ಹೋದರು. ಕಣ್ಣಿಂದ ಮರೆಯಾದರೂ ಬಹುಕಾಲ ಮನಸ್ಸಿನಲ್ಲಿ ಇರುವ ವ್ಯಕ್ತಿತ್ವ ಕೃಪಾ. ಏನಾದರೂ ಜೀವನ ನಿಲ್ಲದು. ಬಂದು ಸ್ನಾನ ಮಾಡಿ, ಊಟ ಮಾಡಿ, ಸಣ್ಣ ನಿದ್ದೆ ಮಾಡಿ ಎದ್ದು, ನೆನಪುಗಳನ್ನು ಮೆಲುಕು ಹಾಕುತ್ತಾ ಕೂತಾಗ... ಬಹಳ ದಿನಗಳಿಂದ ಬರೆಯದೆ ಇದ್ದದ್ದನ್ನು ಮನಗಂಡು, ಕೃಪ ಅವರಿಗೆ ಅಕ್ಷರದ ಮೂಲಕ ಅಶ್ರುತರ್ಪಣ ಕೊಡುವ ಪ್ರಯತ್ನವೇ...