ಪ್ರತಿಭೆ - ಪ್ರದರ್ಶನ - ಪುರಸ್ಕಾರ

ಮೊನ್ನೆ ಭಾನುವಾರ, ತಿಮ್ಮೇಶ ಪ್ರಭು ಉದ್ಯಾನವನದಲ್ಲಿ, ಸ್ನೇಹ ರಂಗದ ವತಿಯಿಂದ ಈ ವರ್ಷದ ಪ್ರತಿಭಾ ಪುರಸ್ಕಾರವನ್ನು ಏರ್ಪಡಿಸಲಾಗಿತ್ತು. ನೂರಕ್ಕೂ ಮಿಕ್ಕಿ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಬೆಳಗಿನ ಸುಂದರ ವಾತಾವರಣದಲ್ಲಿ ಮಕ್ಕಳ ಉತ್ಸಾಹ, ಪೋಷಕರ ಮುಖದಲ್ಲಿದ್ದ ಹೆಮ್ಮೆ, ಸ್ನೇಹ ರಂಗದ ಸದಸ್ಯರು ಕಾರ್ಯಕ್ರಮದ ಯಶಸ್ಸಿನ ಸಲುವಾಗಿ ಉತ್ಸಾಹದಿಂದ ಮಾಡುತ್ತಿದ್ದ ಕೆಲಸಗಳು ಅಲ್ಲೊಂದು ಸಂಭ್ರಮದ, ಸಡಗರದ ದೃಶ್ಯಗಳಾಗಿ ಕಾಣುತ್ತಿದ್ದವು. ಸುಂಕೇನಹಳ್ಳಿ ಸರ್ಕಾರಿ ಶಾಲೆಯ 34 SSLC ವಿದ್ಯಾರ್ಥಿಗಳು ಇದರಲ್ಲಿ ಭಾಗಿಯಾಗಿದ್ದರು. ಸುಂಕೇನಹಳ್ಳಿ ಶಾಲೆ ಯೊಂದಿಗೆ ನನ್ನದು ಒಂದಷ್ಟು ಒಡನಾಟವಿದೆ, ಅಭಿಮಾನವಿದೆ. ಪ್ರತಿಭಾ ಪುರಸ್ಕಾರಗಳು ಅಲ್ಲಲ್ಲಿ ನಡೆಯುತ್ತಲೇ ಇರುತ್ತವೆ. ಪತ್ರಿಕೆಗಳಲ್ಲಿ ಬರುವ ಸುದ್ದಿಗಳನ್ನು ಗಮನಿಸಿದಾಗ, ಆ ಕಾರ್ಯಕ್ರಮಗಳು ಒಂದು ಸೀಮಿತ ಸಮುದಾಯದ ಮಕ್ಕಳನ್ನು ಮಾತ್ರ ಒಳಗೊಂಡಿರುತ್ತದೆ. ಅದು ಒಂದು ಜಾತಿ, ಪಂಗಡದ ಮಕ್ಕಳಾಗಿರಬಹುದು ಅಥವಾ ಒಂದು ಸಂಸ್ಥೆಯ ಸದಸ್ಯರ ಮಕ್ಕಳಾಗಿರಬಹುದು. ಆದರೆ ಸ್ನೇಹ ರಂಗದ ವೈಶಿಷ್ಟ್ಯ ... ಹತ್ತಿರದಲ್ಲೇ ಇರುವ ಸುಂಕೇನಹಳ್ಳಿ ಸರ್ಕಾರಿ ಶಾಲೆ, ಹಾಗೂ ವಿವೇಕಾನಂದ ಶಾಲೆಯ ಮಕ್ಕಳಿಗೆ ಆದ್ಯತೆ .( ಈ ಮಕ್ಕಳ ಪೋಷಕರು ಸಾಮಾನ್ಯವಾಗಿ ಆರ್ಥಿಕವಾಗಿ ಕೆಳವರ್ಗದವರಿದ್ದು, ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಲು ಶಕ್ತಿಮೀರಿ ಪ್ರಯತ್ನ ಮಾಡುತ್ತಿರುವವ...