Posts

Showing posts from August, 2023

ನಾಗರ ಪಂಚಮಿ

Image
  ನಾಗರ ಪಂಚಮಿಯ ಈ ಲೇಖನ ಇಷ್ಟು ತಡವಾಗಿ ಬರಲು ಕಾರಣ ಚಂದ್ರ ಎಂದರೆ ತಪ್ಪಾಗಲಾರದು. ಚಂದ್ರಯಾನ ಮೂರರ ಯಶಸ್ಸಿನ ಪರಿಣಾಮ ಆ ಲೇಖನಕ್ಕೆ ಪ್ರಾಮುಖ್ಯ ಸಿಕ್ಕಿ ಇದು ಹಿಂದೆ ಸರಿದಿತ್ತು. ನೆಲಕ್ಕೆ ಬಿದ್ದ ಬೀಜ ಹೇಗೆ ಮೊಳಕೆ ಒಡೆಯಲು ತವಕಿಸುತ್ತೋ ಹಾಗೆ ಈ ವಿಷಯವೂ ಹೊರಗೆ ಬರಲು ತವಕಿಸುತ್ತಿತ್ತು  ( ಪ್ರಸವ ವೇದನೆ ಎನ್ನಲೇ?). ಇದೀಗ.... ನಾಗರ ಪಂಚಮಿ ಹಬ್ಬ ಅಕ್ಕಂದಿರ ಮನೆಗೆ ಹೋಗಿ, ಊಟ ಮಾಡಿ ಬೆನ್ನು ತೊಳಿಸಿಕೊಂಡು, ಹರಟೆ ಹೊಡೆದು ಬರುವುದು ಮಾಮೂಲು. ಈ ವರ್ಷವೂ ಅದೇ ನಡೆಯಿತು . ಆದರೆ ಈ ಬಾರಿ ದೊಡ್ಡಣ್ಣನ ಅನುಪಸ್ಥಿತಿ ಕಾಡಿತು.   ಚಿಕ್ಕಂದಿನಲ್ಲಿ ನಾಗರ ಪಂಚಮಿ ಹಬ್ಬಕ್ಕೆ ಮಡಿಯನ್ನು ಉಟ್ಟು, ಅಕ್ಕನ ಜೊತೆ ಕೆರೆ ಏರಿಯ ಮೇಲೆ ಇದ್ದ ನಾಗರಕಲ್ಲಿಗೆ ತನಿ ಎರೆದು ಬರುವುದು ಮೊದಲ ಕೆಲಸ. ಸಾಧಾರಣವಾಗಿ ಅಂದು ಜಿಟಿ ಜಿಟಿ ಮಳೆ ಇರುತ್ತಿದ್ದದ್ದು ನೆನಪು. ಅಂದು ಹಬೆಯಲ್ಲಿ ಬೇಯಿಸಿದ ಸಿಹಿ, ಖಾರದ  ಕಡುಬು (ಹೊಯ್ಗಡುಬು) ವಿಶೇಷ. ಅಜ್ಜಿ... ಅಪ್ಪನ ಅಮ್ಮ... ಕಡುಬನ್ನು ಮಡಿಸುತ್ತಿದ್ದ ಕೈಚಳಕ ನೆನಪಿದೆ.  ಹಾಗೇ.. ಎಣ್ಣೆಯಲ್ಲಿ ಕರಿದ ಯಾವುದೇ ಪದಾರ್ಥವನ್ನು ಮಾಡುವುದು ನಿಷೇಧ. ಕೆಲವರು ಜೀವನಪರ್ಯಂತ ಪಡವಲಕಾಯಿಯನ್ನು ತಿನ್ನುವುದಿಲ್ಲ.     (ಹಾವೆಂಬ ಭಾವ). ಈಚಿನ ದಿನಗಳಂತೂ ಮನೆಯಲ್ಲೇ, ಒದ್ದೆ ಬಟ್ಟೆಯಲ್ಲಿ , ನಾಗರ ಪ್ರತಿಮೆಯನ್ನು ಇಟ್ಟು, ಅದಕ್ಕೆ ಭತ್ತದ ಅರಳು, ಕಡಲೆಕಾಳು, ಅಕ್ಕಿ ಹಿಟ್ಟು, ಹ...

ಚಂದ್ರಯಾನ - ಮೂರು

Image
ಜಯಭೇರಿ ಬಾರಿಸಿತು ಚಂದ್ರಯಾನ ಮೂರು ಭಾರತಾಂಬೆಯ ಕಿರೀಟದಿ ಗರಿಗಳು ನೂರಾರು ಕೆಲ ದಿನಗಳಿಂದ ಚಂದ್ರಯಾನ - 3, ವಿಕ್ರಂ ಲ್ಯಾಂಡರ್, ಪ್ರಗ್ಯಾನ್ ರೋವರ್, ಚಂದ್ರಯಾನ ಯಶಸ್ಸಿಗಾಗಿ ಮಾಡಿದ ಹವನ ಹೋಮಗಳು, ಪೂಜೆ ಪ್ರಾರ್ಥನೆಗಳು ಇವೆಲ್ಲ ಸುದ್ದಿಯ ಭಾಗಗಳಾಗಿದ್ದವು. ಇದರ ಜೊತೆಗೆ, ISRO ದ ಕೆಲವರು ಚಂದ್ರಯಾನ -3 ರ ಯಶಸ್ಸಿಗಾಗಿ ತಿರುಪತಿಯಲ್ಲಿ ಮಾಡಿದ ಪೂಜೆಗಾಗಿ ಅವಹೇಳನಕಾರಿ ಮಾತುಗಳನ್ನು ಆಡಿದ ಬುದ್ಧಿಜೀವಿಗಳ ಸುದ್ದಿಯು ಒಂದು ಭಾಗವಾಗಿತ್ತು. ಇರಲಿ ಬಿಡಿ... ಊರಿಗೊಂದು ದಾರಿಯಾದರೆ ಈ ಎಡವಟ್ಟು ಜೀವಿಗಳಿಗೇ ಒಂದು ದಾರಿ... ಬುದ್ಧಿಜೀವಿಗಳು ವಿಘ್ನ ಸಂತೋಷಿಗಳಾಗುತ್ತಿದ್ದಾರೆ, ಎಲ್ಲದರಲ್ಲೂ ತಪ್ಪು ಕಾಣುವುದು, ಕೊಂಕು ಮಾತನಾಡುವುದು  ಅವರ ಜಾಯಮಾನ.  ನಿನ್ನೆ ಬುಧವಾರವಂತೂ ಭಾರತದ ಮೂಲೆ ಮೂಲೆಗಳಲ್ಲಿ, ಗಲ್ಲಿ ಗಲ್ಲಿಗಳಲ್ಲಿ ಬಹು ಜನರ ಹೃದಯದಲ್ಲಿ ಇದ್ದ ಆಶಯ - ಚಂದ್ರಯಾನ-3 ಯಶಸ್ವಿಯಾಗಲಿ ಎಂಬುದು- ಅದು ಪ್ರಾರ್ಥನೆಯೂ ಸಹ. ಆ ಪ್ರಾರ್ಥನೆ ಫಲಿಸಿದ ಕ್ಷಣ ನಿಜಕ್ಕೂ ಅವಿಸ್ಮರಣೀಯ.  TV ಯ ಮುಂದೆ ಕುಳಿತು ನೋಡುತ್ತಿದ್ದ ನನಗೆ, ವಿಕ್ರಮ.. ಚಂದ್ರನ ಮೇಲೆ ತನ್ನ ಕಾಲೂರಿದ ಆ ಕ್ಷಣ ರೋಮಾಂಚನವಾಯಿತು.  ಇದು ಕೋಟ್ಯಾಂತರ ಜನರ ಅನುಭವವೂ ಆಗಿರಬಹುದು ಎಂದು ನನ್ನ ನಂಬಿಕೆ. ನನ್ನಂತೆ ಎಲ್ಲರ ಹೃದಯವು ತುಂಬಿ ಬಂದಿರತ್ತೆ. ISRO ದ ಸಿಬ್ಬಂದಿ ವರ್ಗದವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಸಂಭ್ರಮಿಸಿದ್ದೇ ಸಂಭ್ರಮಿಸಿದ್ದು.  ಪ್ರಧಾನ...

ಓದಿನ ವೈಖರಿ..

Image
ಓದಿನ ವೈಖರಿ.. ಮಂಗಳವಾರ ನನ್ನ ಕೊನೆಯ ಅಕ್ಕ ಗಿರಿಜಾಂಬ ಮನೆಗೆ ಹೋಗಿದ್ದೆ. ಲೋಕಾಭಿರಾಮವಾಗಿ ಮಾತುಕತೆ ಇದ್ದರೂ ಸಹ ಹರಟೆಯ ರೂಪದಲ್ಲಿ ಹಳೆಯದನ್ನು ನೆನೆಸಿಕೊಳ್ಳುವುದು ಒಂದು ಮುಖ್ಯವಾದ ಅಂಗ. ನೆನ್ನೆಯ ಈ ಹರಟೆಯಲ್ಲಿ ಚರ್ಚೆ ಆದದ್ದು ನನ್ನ ನಿದ್ದೆ ಮತ್ತು ಓದು... ಈ ಲೇಖನಕ್ಕೆ ಅದೇ ಸ್ಪೂರ್ತಿ. ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು ಇದು ವೇದ ವಾಕ್ಯದಷ್ಟೇ ಸತ್ಯ. ಜೀವನಕ್ಕೆ ಬೇಕಾದ ಕೌಶಲಗಳನ್ನು ತಿಳಿಸಲು ಪ್ರಾರಂಭ ಬಾಯಿ ಪಾಠದಿಂದ ಅನ್ನುವುದು ನನ್ನ ಸ್ವಂತ ಅನುಭವ. ಸೋಮವಾರದಿಂದ ಶುರುವಾಗಿ ಭಾನುವಾರದವರೆಗೆ ವಾರಗಳು, ಪ್ರಭವದಿಂದ ಅಕ್ಷಯದವರೆಗೆ ಸಂವತ್ಸರಗಳು, ಚೈತ್ರದಿಂದ.. ಫಾಲ್ಗುಣದ ವರೆಗೆ ತಿಂಗಳುಗಳು, ಪಾಡ್ಯ ದಿಂದ ಅಮಾವಾಸ್ಯೆ ಪೂರ್ಣಿಮೆಯವರೆಗೆ ದಿನಗಳು, ಅಂಕಿಗಳು, ಸಂಡೆ ಮಂಡೆ, ಜನವರಿ ಫೆಬ್ರವರಿ ಹೀಗೆ ಎಲ್ಲವೂ ಬಾಯಿ ಪಾಠದ ಮೂಲಕವೇ ಕಲಿತದ್ದು.  ಅಧಿಕೃತವಾಗಿ ಓದು ಬರಹ ಅಕ್ಷರಭ್ಯಾಸದಿಂದ ಶುರುವಾದರೂ, ಅನಧಿಕೃತವಾಗಿ ಬಾಯಿ ಪಾಠ ಒಂದು ಹಂತಕ್ಕೆ ಬಂದಿರುತ್ತದೆ. ಇದು ಮಕ್ಕಳ ಕಲಿಕೆಯನ್ನು ಬಂದವರ ಮುಂದೆ ಪ್ರದರ್ಶಿಸಲು ಒಂದು ಮಾರ್ಗ. ಬಾಯಿ ಪಾಠದ ಮುಂದಿನ ಭಾಗ... ಶಾಲೆಯಲ್ಲಿ ಒಂದರಿಂದ ಹತ್ತರ ಮಗ್ಗಿಯನ್ನು ಎಲ್ಲರೂ ಒಟ್ಟಿಗೆ ಹೇಳುವುದು.. ಒಂದರ ಮಗ್ಗಿಯಿಂದ ಶುರುವಾದ ತಾರಕ ಸ್ವರದ ಹೇಳಿಕೆ ಎರಡರ ನಂತರ ಮಂದ್ರಕ್ಕೆ ಹೋಗಿ  ಒಂಬತ್ತಕ್ಕೆ ಬರುವಷ್ಟಲ್ಲಿ... ಸ್ವರ ಉಡುಗಿಯೇ ಹೋಗಿರುತ್ತಿತ್ತು... ಹತ್ತಕ್ಕೆ ಬಂದಾಗ ಹತ್...

ಸ್ನೇಹ - ಸ್ನೇಹಿತರು

Image
 ಸ್ನೇಹ - ಸ್ನೇಹಿತರು ಹೋದವಾರ ಪತ್ರಿಕೆಗಳು, ಟಿವಿ ಹಾಗೂ ಎಲ್ಲಾ ಮಾಧ್ಯಮಗಳಲ್ಲೂ ಸ್ನೇಹಿತರ ದಿನಾಚರಣೆಯದೇ ಸಾಕು ಸಾಕು ಸಾಕೆನುಸುವಷ್ಟು ಅಬ್ಬರ.  ಸ್ವಲ್ಪ ಕಿರಿಕಿರಿ ಆಗಿದ್ದೂ ಉಂಟು. ಆದರೆ ಇನ್ನೊಂದು ದಿಕ್ಕಿನಲ್ಲಿ ಯೋಚಿಸಿದಾಗ... ಅದೂ ಸಹ ನಮ್ಮದೇ ಸಂಪ್ರದಾಯಗಳನ್ನು ಹೋಲುತ್ತದೆ.... ಉದಾಹರಣೆಗೆ ವರ್ಷಕೊಮ್ಮೆ ರಾಮ ನವಮಿಯ ಪಾನಕ, ಸಂಕ್ರಾಂತಿಯ ಎಳ್ಳು ಬೆಲ್ಲ, ನವರಾತ್ರಿಯ ಬನ್ನಿ, ನಾಗರ ಪಂಚಮಿಯಲ್ಲಿ ಬೆನ್ನಲ್ಲಿ ಬಿದ್ದವರಿಗೆ ಬೆನ್ನು ತೊಳೆಯುವ ಸಂಭ್ರಮ, ಭೀಮನ ಅಮಾವಾಸ್ಯೆ ಯಲ್ಲಿ ಅಣ್ಣ ತಮ್ಮಂದಿರು ಭಂಡಾರ ಹೊಡೆಯುವುದು, ಗೌರಿ ಹಬ್ಬದಲ್ಲಿ ಹೆಣ್ಣು ಮಕ್ಕಳಿಗೆ ಬಾಗಿನ ಕೊಡುವುದು ಹೀಗೆ... ಸಂಭಂಧಗಳನ್ನು ಬೆಸೆಯುವ ಕಾರ್ಯಕ್ರಮಗಳು... ಹಾಗಾಗಿ ನಿರಂತರವಾದ ಸ್ನೇಹವನ್ನು ಬೆಸೆಯಲು / ಸಂಭ್ರಮಿಸಲು ಒಂದು ದಿನ ಒಳ್ಳೆಯದೇ ಅಲ್ಲವೇ?  ಗೆಳೆಯರು, ಗೆಳೆತನ ಅಂದಾಗ ನನಗೆ ಮೊದಲು ಹೊಳೆಯುವುದು ಮಹಾಭಾರತದ ಎರಡು ಗೆಳೆತನಗಳು.ಒಂದು ಕೃಷ್ಣ ಸುಧಾಮರದು ಇನ್ನೊಂದು ದೃಪದ ದ್ರೋಣರದು. ಮೊದಲನೆಯದು ಹೇಗಿರಬೇಕು ಎಂದು ತೋರಿಸಿದರೆ ಎರಡನೆಯದು ಹೇಗಿರಬಾರದು ಎಂದು ತೋರಿಸುತ್ತೆ. ಕೃಷ್ಣ ತನ್ನ ಬಾಲ್ಯದ ಗೆಳೆಯನನ್ನು ಯಾವುದೇ ಹಂತದಲ್ಲೂ ಮರೆಯಲಿಲ್ಲ, ಕಡೆಗಣಿಸಲಿಲ್ಲ, ಬಹು ಆದರದಿಂದಲೇ ಕಂಡವನು. ಆದರೆ ದೃಪದನ ಮನಃಸ್ಥಿತಿಯೇ ಬೇರೆ. ತಾನು ರಾಜನಾದ ಮೇಲೆ ಸಹಾಯ ಕೇಳಲು ಬಂದ ದ್ರೋಣನನ್ನು ಕೀಳಾಗಿ ಕಂಡಿದ್ದು, ಛೇಡಿಸಿದ್ದು, ಭಿಕ್ಷೆಯನ್ನು ಕೊಡಬಲ್ಲ...

ಪ್ರತಿಭಾ ಪುರಸ್ಕಾರ

Image
 ಪ್ರತಿಭಾ  ಪುರಸ್ಕಾರ ಹೋದ ಭಾನುವಾರ, ಗವಿಪುರದ ಹರಿ ಹರೇಶ್ವರನ ಸನ್ನಿಧಿಯಲ್ಲಿ, ತಿಮ್ಮೇಶ ಪ್ರಭು ಉದ್ಯಾನವನದಲ್ಲಿ, ಸ್ನೇಹ ರಂಗದ ಆಶ್ರಯದಲ್ಲಿ 12ನೇ ವರ್ಷದ ಪ್ರತಿಭಾ ಪುರಸ್ಕಾರದ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಿದೆವು.. ಸುಮಾರು ನೂರು ಜನ ಮಕ್ಕಳಿಗೆ - 10ನೇ ತರಗತಿ ಹಾಗೂ ಪಿಯು ತರಗತಿಯಲ್ಲಿ ಹೆಚ್ಚು ಅಂಕ ತೆಗೆದ, ಜೊತೆಗೆ ಕನ್ನಡ ಮತ್ತು ಸಂಸ್ಕೃತದಲ್ಲಿ ಹೆಚ್ಚು ಅಂಕ ಗಳಿಸಿದವರನ್ನು ಪುರಸ್ಕರಿಸಲಾಯಿತು. ಮಕ್ಕಳು, ಅವರ ಹೆತ್ತವರು, ಕೆಲ ಉಪಾಧ್ಯಾಯರುಗಳು,ಹಿತೈಷಿಗಳು ಪಟ್ಟ ಸಂಭ್ರಮ ಹೇಳತೀರದು... ಅವರವರ ಮಕ್ಕಳು ಗೌರವಿಸಲ್ಪಟ್ಟಾಗ ಅವರು ಹಿಗ್ಗುತ್ತಿದ್ದದ್ದನ್ನು ನೋಡಲು ಸಂತಸವಾಗುತಿತ್ತು.... ಸಹಜವಲ್ಲವೇ ನಮ್ಮ ಮಕ್ಕಳನ್ನು ಯಾರಾದರೂ ಮೆಚ್ಚಿದರೆ, ಗೌರವಿಸಿದರೆ ನಮಗೆ ಹೆಮ್ಮೆಯೇ. ಸ್ನೇಹ ರಂಗ ಶುರುವಾಗಿದ್ದು ಒಂದು ಅನೌಪಚಾರಿಕ ಗುಂಪಿನಂತೆ.. ಇದೀಗ ಅದು ಒಂದು ಸಂಸ್ಥೆಯಾಗಿ ರೂಪು ಗೊಳ್ಳುತ್ತಿದೆ.  ಅಂದಿಗೆ ಸಮಾನ ಮನಸ್ಕರು ಒಂದಷ್ಟು ಜನ ಸೇರಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಶುರುಮಾಡಿದೆವು. ಮಂಜು (ಎ. ಮಂಜುನಾಥ) ಈ ಕಾರ್ಯಕ್ರಮಕ್ಕೆ ತನ್ನನ್ನು ತಾನು ಸಂಪೂರ್ಣ ತೊಡಗಿಸಿಕೊಂಡವನು, ಹಾಗೂ ಸಾಕಷ್ಟು ಜನರ ಸಹಕಾರದೊಂದಿಗೆ,  ಇಂದಿನವರೆಗೂ ಅದು ನಡೆದು ಬರುತ್ತಿದೆ. ಸುಮಾರು 15 ಮಕ್ಕಳನ್ನು ಗೌರವಿಸುವ ಗುರಿಯೊಂದಿಗೆ ಶುರುವಾದ ಕಾರ್ಯಕ್ರಮ ಇಂದು ಶತಕವನ್ನು ಮುಟ್ಟಿದೆ ಅನ್ನುವುದೇ ಹೆಗ್ಗಳಿಕೆ. ...